Sunday, March 07, 2010

Gita satsang 5.18

vidya-vinaya-sampanne
brahmane gavi hastini
suni caiva sva-pake ca
panditah sama-darsinah 5.18

The humble sage, by virtue of true knowledge, sees with equal vision a learned and gentle brahmana, a cow, an elephant, a dog and a dog-eater.


ವಿದ್ಯಾವಿನಯ ಸಂಪನ್ನೆ ಬ್ರಾಹ್ಮಣೆ ಗವಿ ಹಸ್ತಿನಿ |
ಶುನಿ ಚೈವ ಶ್ವಪಾಕೆ ಚ ಪಂಡಿತಾಃ ಸಮ ದರ್ಶಿನಃ || 5.18

"ವಿದ್ಯಾವಿನಯರಾದ ಬ್ರಾಹ್ಮಣರಲ್ಲಿ, ಗೋವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ ಮತ್ತು ಚಂಡಾಲನಲ್ಲಿಯೂ ಜ್ಞಾನಿಗಳು(ಪಂಡಿತರು) ಸಮದರ್ಶಿಗಳಾಗಿರುತ್ತರೆ."

ಹೇಗೆ ಸಮದರ್ಶಿಗಳಾಗುತ್ತರೆ ಅಂದರೆ?
ಬ್ರಾಹ್ಮಣರಲ್ಲಿ, ಗೋವಿನಲ್ಲಿ, ಆನೆಯಲ್ಲಿ ಎಲ್ಲರಲ್ಲಿಯೂ ಅಂತರ್ಯಾಮಿಯಾಗಿ ಇರುವವನು ಈ ಪರಮಾತ್ಮ ಒಬ್ಬನೆ. ಎಲ್ಲ ಜೀವಗಳ ಒಳಗೆ ಇರುವ ಈತನು ದೋಷದೂರನಾಗಿ ಇದ್ದು, ಸಮಾನನಾಗಿ ಇದ್ದಾನೆ. ಬ್ರಾಹ್ಮಣ-ಗೋವುಗಳ ಗುಣ-ದೋಷಗಳು ನಾನಾ ಬಗೆಯಲ್ಲಿ ಇದ್ದರೂ, ಅವುಗಳೊಳಗೆ ಇರುವ ಪರಮಾತ್ಮನ ರೂಪ ಮಾತ್ರ ಸಮಾನವಾಗಿರುತ್ತದೆ.
ಹೀಗೆ ಯಾರು ತಿಳಿಯುತ್ತಾರೊ, ಅವರಿಗೆ ಜ್ಞಾನ ಸಿಗುತ್ತದೆ. ಅವರು ಪಂಡಿತರು.

ಇಲ್ಲಿ ನಮ್ಮ ೩-೪ ಪ್ರಶ್ನೆಗಳಿಗೆ ಸಮಾಧಾನ ಸಿಗುತ್ತದೆ:
೧. ದೇವರು ಎಲ್ಲರಲ್ಲೂ ಇದ್ದಾನೆಯೊ?
ಹೌದು ಪರಮಾತ್ಮನು ಎಲ್ಲರಲ್ಲೂ ಇದ್ದಾನೆ.
೨. ಹಾಗಾದರೆ ಆ ದೇವನು ನಾಯಿಯಲ್ಲೂ ಇದ್ದಾನೊ?
ಹೌದು.. ಆ ಪರಮಾತ್ಮನು ನಾಯಿಯೊಳಗೂ ಇದ್ದಾನೆ, ಮಾತ್ರವಲ್ಲ, ನಾಯಿ ಮಾಂಸ ಬೇಯಿಸಿ ತಿನ್ನುವವನ ಒಳಗೂ ಇದ್ದಾನೆ!
೩. ಹಾಗಾದರೆ, ಗೋವು-ನಾಯಿ ಎಲ್ಲವೂ ಒಂದೆಯೇ? ಎರಡನ್ನೂ ಸಮಾನವಾಗಿ ನೋಡೋಣವೆ? ನಾಯಿಯ ದೋಷ ದೇವರಿಗೆ ಬರೋಲ್ಲವೆ?

ಇಲ್ಲ, ಪರಮಾತ್ಮನು ಬೇರೆ ಬೇರೆ ದೇಹಗಳಲ್ಲಿ ಇದ್ದರೂ, ಆತ ದೋಷ ದೂರ. ಮಾತ್ರವಲ್ಲ, ಆಯಾ ದೇಹಗಳಲ್ಲಿ ಇದ್ದರೂ ಗುಣಪೂರ್ಣನಾಗಿಯೇ ಇರುತ್ತಾನೆ.
ಮುಂದಿನ ಶ್ಲೋಕದಲ್ಲಿ ಹೇಳುತ್ತಾನೆ:
"ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ಬ್ರಹ್ಮಣಿ ತೇ ಸ್ಥಿತಃ||"

ಅವನ ಒಂದು ಹೆಸರೆ ’ಸಮ’ ಎಂದು. ವಿಷ್ಣು ಸಹಸ್ರನಾಮದಲ್ಲಿ ಬರುತ್ತದೆ.
"ಸಮಾತ್ಮ ಅಸಮ್ಮಿತ ಸಮಃ"

ಲೌಕಿಕದ ಒಂದು ಉದಾಹರಣೆಯನ್ನು ನೋಡಬಹುದು:
ಈಗ ಬಲ್ಬ್ (bulb) ಇದೆ. ಅದು ೬೦ ವ್ಯಾಟ್, ೧೦೦ ವ್ಯಾಟ್, ೦ ಕ್ಯಾಂಡಲ್, ಟ್ಯೂಬ್ ಲೈಟ್ ಹೀಗೆ ಬೇರೆ ಬೇರೆ ರೀತಿಯವು ಇದ್ದಾವೆ.
ಒಂದೊಂದು ಬಲ್ಬ್ ಒಂದೊಂದು ರೀತಿಯ ಬೆಳಕು ಕೊಡುತ್ತದೆ.ಆದರೆ ಹಿಂದೆ ಇರುವ ವಿದ್ಯುತ್ (electric current) ಒಂದೆ.
ಅದೇ plug-point , ಅದೇ holder ಇದ್ದರೂ, ೧೦ ವ್ಯಾಟ್ ಬಲ್ಬ್ ಹಾಕಿದರೆ ಬರುವ ಪ್ರಕಾಶವೇ ಬೇರೆ. ಅದನ್ನು ತೆಗೆದು ೧೦೦ ವ್ಯಾಟ್ ಬಲ್ಬ್ ಹಾಕಿದರೆ ಬೆಳಕು ಹೆಚ್ಚು. ಆದರೆ ನಾವು ವಿದ್ಯುತನ್ನು ಯಾವುದೆ ರೀತಿಯಲ್ಲಿ ಹೆಚ್ಚು-ಕಡಿಮೆ ಮಾಡಲಿಲ್ಲ. ಈ ಬಲ್ಬನ್ನು ತೆಗೆದು ಮತ್ತೊಂದು energy saving incandescent ಬಲ್ಬ್ ಹಾಕಿದರೆ ಬರುವ ಬೆಳಕೆ ಬೇರೇ ರೀತಿಯದು.
ಇದು ಹೇಗೆ? ಎಂದರೆ, ಅದರ ಹಿಂದೆ ಅಂತರ್ಯಾಮಿಯಾಗಿ ಹರಿಯುತ್ತಿರುವ ವಿದ್ಯುತ್! ಅದೇ 230V, 50Hz, 150mA ವಿದ್ಯುತ್ ಆದರೆ, ಬಲ್ಬಿನ ಯೋಗ್ಯತೆಯ ಮೇಲೆ, ಅದರೆ capacity ಯಂತೆ ಬೆಳಕಿನ ರೂಪಾಂತರವಾಯುತ್ತದೆ.

ಇಲ್ಲೂ ಹಾಗೆಯೇ, ಆ ಅಂತರ್ಯಾಮಿ ಪರಮಾತ್ಮನೆ ಎಲ್ಲಾ ಜೀವಗಳ ಒಳಗೂ ಇದ್ದು, ಒಂದೆ ರೀತಿಯಲ್ಲಿ ಇದ್ದು, ಜೀವಿಗಳಿಗೆ ಪ್ರೇರಣೆ ನೀಡುತ್ತಾನೆ. ಆತ ಎಲ್ಲರ ಒಳಗೂ ಸಮಾನವಾಗಿ ಇದ್ದರೂ, ಬೆಳಗುವ ವಿದ್ಯುತ್ತಿನಂತೆ ಅದೇ ಪೂರ್ಣ ರೂಪದಲ್ಲಿ ಇದ್ದಾನೆ.
"ಪೂರ್ಣಮದಃ ಪೂರ್ಣಮಿದಂ"

ಹೀಗೆ ಜ್ಞಾನಿಗಳು ಆ ಶುದ್ಧ ಪರಮಾತ್ಮನ ಸಮಾನವಾದ ದೋಷ-ದೂರವಾದ, ಗುಣ-ಪರಿಪೂರ್ಣವಾದ ರೂಪವನ್ನು ಎಲ್ಲಾ ಜೀವಿಗಳಲ್ಲಿಯೂ ಕಂಡು ತಿಳಿಯುತ್ತಾ, ’ಸಮದರ್ಶಿ’ಗಳಾಗುತ್ತಾರೆ ಎಂದು ಪರಮಾತ್ಮನು ಈ ಗೀತೆಯ ಶ್ಲೋಕದಲ್ಲಿ ಹೇಳುತ್ತಿದ್ದಾನೆ.

ಧ್ರುವನಿಗೆ ಪರಮಾತ್ಮನ ಸಾಕ್ಷಾತ್ಕಾರವಾದಾಗ, ಆ ಶ್ರೀಮನ್ನಾರಾಯಣನು ಮಾತಾನಾಡುವಂತೆ ಧ್ರುವನಿಗೆ ಹೇಳುತ್ತಾ, ತನ್ನ ಶಂಖವನ್ನು ಧ್ರುವನ ಕೆನ್ನೆಗೆ ತಾಗಿಸುತ್ತಾನೆ. ಆಗ ಧ್ರುವನು ಹೇಳುತ್ತಾನೆ:
"ಯೋ ಅಂತಃಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಂ|
ಸಂಜೀಯತ್ಯಖಿಲ ಶಕ್ತಿಧರಃ ಸ್ವಧಾಮ್ನಾ..."

ಯಾರು ನನ್ನ ಒಳಗೆ ನಿಂತು ನಾನು ನುಡಿಯುವಂತೆ ಪ್ರೇರೇಪಿಸುತ್ತಾನೋ, ನನ್ನ ಇಂದ್ರಿಯಗಳ ಒಳಗೆ ನಿಂತು ನನ್ನ ಎಲ್ಲ ಕಾರ್ಯಗಳನ್ನು ಮಾಡುತ್ತಾನೊ, ಅಂಥ ಅಂತರ್ಯಾಮಿಗೆ ನನ್ನ ನಮಸ್ಕಾರ.

ನಮಗೆ theory ಅರ್ಥವಾಯಿತು; ಉದಾಹರಣೆಯು ಅರ್ಥವಾಯಿತು; ಆದರೆ ಇದು ಸಂಪೂರ್ಣವಾಗಿ ನಮ್ಮ ಒಳಗೆ ಹೋಗಬೇಕು ಎಂದರೆ, ಪುನಃ ಪುನಃ ನೆನಪು ಮಾಡಿಕೊಳ್ಳುತ್ತಾ ಇರಬೇಕು. ಮನನ ಮಾಡಿಕೊಳ್ಳುತ್ತಾ ಇರಬೇಕು. ಹಿಂದಿನ ಶ್ಲೋಕದಲ್ಲಿ ಕೃಷ್ಣನೇ ಹೇಳುತ್ತಾನೆ:
"ತದ್ಬುದ್ಧಯಃ ತದಾತ್ಮನಃ ತನ್ನಿಷ್ಠಾ ತತ್ಪರಾಯಣಾಃ"

ಪುನಃ ಪುನಃ ಶ್ರವಣ-ಮನನಾದಿಗಳನ್ನು ಮಾಡುತ್ತಾ, ಪರಮಾತ್ಮನಲ್ಲಿಯೇ ಮನ ಬುದ್ಧಿ ಇಟ್ಟರೇ, ಆಗ ವೈಕುಂಠ ಸುಲಭವು. ಇದಕ್ಕೆ, ಮತ್ತೆ, ಪರಮಾತ್ಮನ ಕೃಪೆ, ಗುರುಗಳ ಆಶೀರ್ವಾದ ಅವಶ್ಯಕತೆ ಇದೆ.

No comments: